- ಘನ ತ್ಯಾಜ್ಯ ವಿಲೇವಾರಿ: ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಮುದ್ದೇಬಿಹಾಳ, ಜುಲೈ 27: ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಸಮೀಪದ ವಿದ್ಯಾನಗರ ರಸ್ತೆಯಲ್ಲಿ ಗ್ಯಾರೇಜ್ ಹಾಗೂ ಕೆಲವು ಅಂಗಡಿಗಳಿಂದ ಘನತ್ಯಾಜ್ಯವನ್ನು ಬಹಿರಂಗವಾಗಿ ಎಸೆಯುತ್ತಿರುವ ಪರಿಣಾಮ ಪರಿಸರ ಮಾಲಿನ್ಯ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಬಿಸಿ ಹೈಸ್ಕೂಲ್ ಮುಂಭಾಗದ ವಿದ್ಯಾನಗರ ಸಂಪರ್ಕ ರಸ್ತೆಯಲ್ಲಿರುವ ಹಲವು ಅಂಗಡಿಗಳಿಂದ ಪ್ಲಾಸ್ಟಿಕ್ ತ್ಯಾಜ್ಯ, ವಾಹನಗಳ ದುರಸ್ತಿ ಬಳಿಕ ಉಳಿಯುವ ಕಸ ಹಾಗೂ ಇತರೆ ಘನತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಹಾಕಲಾಗುತ್ತಿದೆ. ಇದರಿಂದ ದುರ್ವಾಸನೆ, ಅಸ್ವಚ್ಛತೆ ಮತ್ತು ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಕುರಿತು ಸಾರ್ವಜನಿಕರು ಹಲವು ಬಾರಿ ಪುರಸಭೆಗೆ ದೂರು ನೀಡಿದ್ದು, ಪೌರ ಕಾರ್ಮಿಕರು ಕಸವನ್ನು ಸ್ವಚ್ಛಗೊಳಿಸಿ ತೆರಳಿದರೂ ಮತ್ತೆ ಅದೇ ಸ್ಥಳದಲ್ಲಿ ತ್ಯಾಜ್ಯವನ್ನು ಎಸೆಯುವ ಘಟನೆಗಳು ಮರುಕಳಿಸುತ್ತಿವೆ ಎಂದು ಆರೋಪಿಸಿದ್ದಾರೆ.

ನಗರದಲ್ಲಿ ಮನೆಮನೆಗೆ ಕಸ ಸಂಗ್ರಹಿಸುವ ವಾಹನಗಳು, ಪೌರ ಕಾರ್ಮಿಕರು ಹಾಗೂ ಜಾಗೃತ ದಳದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೂ ಕೆಲ ವ್ಯಾಪಾರಸ್ಥರಲ್ಲಿ ನಾಗರಿಕ ಪ್ರಜ್ಞೆಯ ಕೊರತೆ ಕಂಡುಬರುತ್ತಿದೆ ಎಂದು ಸ್ಥಳೀಯ ಅಂಗಡಿಕಾರ ಶ್ರೀಧರ ನಾಗನೂರು ತಿಳಿಸಿದ್ದಾರೆ.
ಘನತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವ ಅಂಗಡಿಕಾರರ ವಿರುದ್ಧ ಪುರಸಭೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಸಮೀಪದ ವಿದ್ಯಾನಗರ ರಸ್ತೆಯಲ್ಲಿ ಗ್ಯಾರೇಜ್ ಹಾಗೂ ಇತರೆ ಅಂಗಡಿಗಳಿಂದ ಘನತ್ಯಾಜ್ಯವನ್ನು ಬಹಿರಂಗವಾಗಿ ಎಸೆಯುತ್ತಿರುವ ಪರಿಣಾಮ ಪರಿಸರ ಮಾಲಿನ್ಯ ಹೆಚ್ಚುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.







